Thursday, January 28, 2010

ಹೋರಾಟದ ಹಾದಿ



ರಾಯರು ಫೋನ್ ಮಾಡಿದರು."ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ದಯವಿಟ್ಟು ಲೈನ್ ಹೋಲ್ಡ್ ಮಾಡಿರಿ ಇಲ್ಲವೇ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಎಂಬ ಉತ್ತರ ದೊರೆಯಿತು.೧೫ ನಿಮಿಷದ ನಂತರ ಮತ್ತೆ ರಾಯರ ಫೋನ್ ರಿಂಗ್ ಆಯಿತು.ಮತ್ತೆ ಅವರದೇ ಫೋನ್.ರಾಯರು ಫೋನ್ ಎತ್ತಿದರು."ಅದು ಮೊಬೈಲ್ ಗೆ ಸರಿಯಾಗಿ ರೇಂಜು ಸಿಗುವುದಿಲ್ಲ ಒಮ್ಮೊಮ್ಮೆ ಹೀಗೆ ಮಧ್ಯದಲ್ಲಿ ಕಟ್ ಆಗುತ್ತೆ ಎಂದರು.ಹ ಪರವಾಗಿಲ್ಲ ನಾನು ಟ್ರೈ ಮಾಡಿದೆ ಗೊತ್ತಾಯಿತು ಎಂದರು ರಾಯರು.ಅದು ಏನು ಹೇಳಿದೆ ಅಂದರೆ ನಿಮ್ಮ ಮನೆ ಆಸ್ತಿ ಎಲ್ಲವು ಸಾಕು,ನಮಗೆ ಸಂಪೂರ್ಣ ಒಪ್ಪಿಗೆ.ಎಲ್ಲವನ್ನು ಬಿಡಿಸಿ ಹೇಳುವ ನಿಮ್ಮ,ನೇರ ನಡೆ ನುಡಿ,ನಿಮ್ಮ ತಂದೆ ತಾಯಿ,ಮನೆ ಸುತ್ತ ಮುತ್ತಲ ಪರಿಸರ ಎಲ್ಲ ನಮಗೆ ಸಾಕಷ್ಟು ತೃಪ್ತಿ ನೀಡಿದೆ,ಎಂದರು.ಮನೆಗೂ ಫೋನ್ ಮಾಡಿ ತಿಳಿಸುತ್ತೇವೆ ಮೊದಲು ನಿಮಗೆ ತಿಳಿಸಿದ್ದು ಎಂದರು."ರಾಯರು ಇನ್ನೇನು ಸಂತೋಷಕ್ಕೆ ಪಾರವೇ ಇಲ್ಲ.

ಮನೆಯಲ್ಲಿ ರಾಯರ ತಾಯಿ ಫೋನ್ ಎತ್ತಿದ್ದರು.ಅವರಿಗಂತೂ ಆನಂದದಿಂದ ಕಣ್ಣು ತುಂಬಿ ಬಂತು.ಮನೆಯಲ್ಲಿ ಸುರುವಾಯಿತು ಸಡಗರ ಸಂಭ್ರಮ,ಬ್ರಹ್ಮರಾಯರು ಅವರ ಮನೆಗೆ ಹೋಗಿ ಇನ್ನೊಮ್ಮೆ ಮಾತಾಡಿಸಿ ಬಂದರು.ಹುಡುಗಿ ಕಡೆಯವರು ಔಪಚಾರಿಕವಾಗಿ ಮನೆ ನೋಡಲು ಬಂದದ್ದು ಆಯಿತು.ಎಲ್ಲೆಡೆ ಫೋಟೋ ತೆಗೆದದ್ದು,ಸಂಭ್ರಮಿಸಿದ್ದು ನೆಂಟರಿಷ್ಟರು ಮಾಡಿದ್ದೂ,ಫೋನ್ ಮಾತುಕತೆ ಸುರುವಾದದ್ದು ಎಲ್ಲವು ಆಯಿತು.

ವಿವಾಹಕ್ಕೂ,ವಿವಾದಕ್ಕೂ ಎಲ್ಲಿಲ್ಲದನಂಟು.ಸಾಮಾನ್ಯವಾಗಿ ಯಾವುದೇ ದೊಡ್ಡ ಸಮಾರಂಭ ಮಾಡುವಾಗ ಇವೆಲ್ಲ ಮಾಮೂಲಿ.ಆದರೆ ರಾಯರಿಗೆ ಎಂಗೇಜ್ಮೆಂಟ್ ಇಂದಲೇ ಪಿಕಲಾಟ ಸುರುವಾಯಿತು. ಕೆಲವರು ನಮ್ಮ ಮನೆಗೆ ರಾಯರು ಬಂದೆ ಇಲ್ಲ ಎಂದರು.ಇನ್ನು ಕೆಲವರಿಗೆ ಹೇಳಿಕೆ ಸಾಕಾಗಲಿಲ್ಲ.ಹೀಗೆ ಕುಂದು ಕೊರತೆ ಹುಡುಕುವವರಿಗೆ ಏನೇನು ಬರವಿರಲಿಲ್ಲ,ನೀವು ಎಷ್ಟೇ ಸರಿ ಮಾಡಿದರು ಅದರಲ್ಲಿ ಒಂದಾದರೂ ಹುಳುಕನ್ನು ಎತ್ತಿ ತೋರಿಸುತ್ತಿದ್ದರು.

ಮದುವೆಯ ೨ ದಿನ ಮೊದಲೇ ರಾಯರ ೩ ಜನ ಸೋದರ ಮಾವಂದಿರು ಬಂದಿದ್ದರು.ಚಿಕ್ಕಮ್ಮಂದಿರು,ಅಣ್ಣ,ತಮ್ಮಂದಿರು,ಮಕ್ಕಳು ಎಲ್ಲರು ಸೇರಿದ್ದರು.ರಾಯರ ಮನೆ ತುಂಬಾ ಗೌಜಿ.ಎಲ್ಲೆಲ್ಲು ಗಡಿಬಿಡಿ,ಗಲಾಟೆ.ಕೆಲವರು ರಾಯರನ್ನು ತಮಾಷೆ ಮಾಡುವುದರಲ್ಲಿ ತೊಡಗಿದ್ದರೆ,ಇನ್ನು ಕೆಲವರು ಪ್ರಸ್ತುತ ರಾಜಕೀಯದ ಬಗ್ಗೆ ಮಾತಾಡುತ್ತಿದ್ದರು.ವಾಜಪೇಯಿ ಸರಕಾರ ೧೬ ದಿನದಲ್ಲಿ ಬಿದ್ದು ಹೋದುದು,ದೇವೇಗೌಡ ಪ್ರಧಾನಿ ಆಗಿದ್ದು ಎಲ್ಲೆಡೆ ಬಿಸಿ ಬಿಸಿ ಚರ್ಚೆ ಆಗುತ್ತಿತ್ತು.ಇನ್ನು ಕೆಲವರು ಬಾಳೆ ಎಲೆ,ಪಾತ್ರ ಸಾಮಾನು ಮುಂತಾದವುಗಳನ್ನು ಜೋಡಿಸುತ್ತಿದ್ದರು.ಮಕ್ಕಳು "ಕಂಬಾಟ","ಹಿಡಿಯುವ ಆಟ(ಮುಟ್ಟಾಟ)" ಮುಂತಾದವುಗಳಲ್ಲಿ ಮಗ್ನರಾಗಿದ್ದರು.ಹೆಂಗಸರಿಗಂತೂ ಸೀರೆ,ಚಿನ್ನ ಒಡವೆಗಳನ್ನು ಎಷ್ಟು ನೋಡಿದರು ಸಾಕಾಗುತ್ತಿರಲಿಲ್ಲ.ಇನ್ನೊಬ್ಬರ ಕುತ್ತಿಗೆಯಲ್ಲಿ ಏನೇ ಕಂಡರೂ ಅದು ಅವರಿಗೆ ಚೆನ್ನಾಗಿ ತೋರುತ್ತಿತ್ತು.ಪರಸ್ಪರರ ಭಾಗ್ಯವನ್ನು ವರ್ಣಿಸುತ್ತ,ತಮ್ಮ ತಮ್ಮ ಕುಂದು ಕೊರತೆ ಹೇಳುತ್ತಾ,ಇನ್ನು ಕೆಲವರು ತಮ್ಮ ಮದುವೆಯಂದು ನಡೆದ ಘಟನೆಯನ್ನು ಮೆಲುಕು ಹಾಕುತ್ತಿದ್ದರು.ಮೂಲೆಯಲ್ಲಿ ಕುಳಿತಿದ್ದ ಅಜ್ಜಿಯಂದಿರಂತು ತಮ್ಮ ಸೊಸೆಯಂದಿರನ್ನು ದೂಷಿಸಲು ಶುರು ಮಾಡಿದ್ದರು.ತಮ್ಮ ಕಡೆಗೆ ಈಗ ಮಗ ಲಕ್ಷ್ಯ ಕೊಡುವುದಿಲ್ಲ,ಹೆಂಡತಿ ಹೇಳಿದ ಹಾಗೆ ಕೇಳುತ್ತಾನೆ ಹೀಗೆ ಸೊಸೆಯಂದಿರ ಜೊತೆಗೆ ತಮ್ಮ ಮಗಂದಿರಿಗೂ ಸಹಸ್ರ ನಾಮಾರ್ಚನೆ ಶುರು ಮಾಡಿದ್ದರು.ರಾಯರ ತಾಯಿಗಂತೂ ಎಲ್ಲ ಗಡಿಬಿಡಿ,ಗಡಿಬಿಡಿ ಆಗುತ್ತಿತ್ತು.ತಾನು ಇಟ್ಟ ವಸ್ತುಗಳೊಂದು ಸರಿಯಾಗಿ ಸಿಗುತ್ತಿರಲಿಲ್ಲ.ಎಲ್ಲೆಲ್ಲೋ ಮೂಲೆಯಲ್ಲಿ ಬಿದ್ದಿರುತ್ತಿದ್ದವು.ಹೊರಗಡೆ ಚಪ್ಪರದಲ್ಲಿ ವೀಳ್ಯದೆಲೆಯಂತು ಪುರುಸೊತ್ತಿಲ್ಲದೆ ಖಾಲಿಯಾಗುತ್ತಿತ್ತು."ಮಾಷ್ಟ್ರೆ ಹೊಗೆಸೊಪ್ಪು ಪ್ರಯೋಜನ ಇಲ್ಲೆ,ನಾಳಂಗೆ ಬೇರೆ ತರಕ್ಕು ಇದು ಏನು ಸಾಲ"(ಹೊಗೆಸೊಪ್ಪು ಪ್ರಯೋಜನವಿಲ್ಲ,ನಾಳೆಗೆ ಬೇರೆ ತರಬೇಕು,ಇದರ ಕ್ವಾಲಿಟಿ ಸಾಲದು)ಎಂದು ಶ್ಯಾಮ ಭಟ್ಟರು ಬ್ರಹ್ಮರಾಯರಿಗೆ ಸಲಹೆ ಕೊಟ್ಟೆ ಬಿಟ್ಟರು.ಶ್ಯಾಮ ಭಟ್ಟರು ರಾಯರ ದೊಡ್ಡಪ್ಪನ ಮಗ ಅಣ್ಣ.ಅವರೇ ಎಲ್ಲ ಕೆಲಸ ಕಾರ್ಯ ನೋಡಿಕೊಳ್ಳುತ್ತಿದ್ದರು.ಅಂಗಳಕ್ಕೆಲ್ಲ ಚಪ್ಪರ ಹಾಕಿದ್ದರು.ಜೂನ್ ತಿಂಗಳು,ಹೊರಗಡೆ ಧೋ ಎಂದು ಮಳೆ ಸುರಿಯುತ್ತಿತ್ತು.ಗುಡುಗು,ಮಿಂಚು ಬಂದಾಗಲಂತೂ ಮಕ್ಕಳ ಚೀರಾಟ,ಕೂಗಾಟ ಮುಗಿಲು ಮುಟ್ಟುತ್ತಿತ್ತು.ಚಾ,ಕಾಫಿ ಆಗಾಗ ಕೇಳುತ್ತಿದ್ದರು.ಇಡಿ ಮನೆಯೇ ಕಲ ಕಲ ಎನ್ನುತ್ತಿತ್ತು.

ಮದುವೆಯ ಹಿಂದಿನ ದಿನ ನಡೆಯಬಾರದ ಘಟನೆ ನಡೆದೇ ಹೋಯಿತು.ಮಳೆಯ ಅಬ್ಬರ ಮತ್ತಷ್ಟು ಜೋರಾಯಿತು.ಜೊತೆಗೆ ಗಾಳಿಯೂ ಸೇರಿದ್ದರಿಂದ ತೊಂದರೆ ಸುರುವಾಯಿತು.ಚಪ್ಪರಕ್ಕೆ ಹಾಕಿದ್ದ ೨ ಟಿನ್ ಮಧ್ಯದ್ದು ಸ್ವಲ್ಪ ಜಾರಿತು.ಶ್ಯಾಮಣ್ಣನಿಗೆ ಕೂಡಲೇ ಗೊತ್ತಾಯಿತು,ಬಂದು ಸರಿ ಮಾಡಿ ಆಗುವಷ್ಟರಲ್ಲೇ ಕಾಲ ಮಿಂಚಿತ್ತು.ತುಂಬಾ ನೀರು ಒಳಗೆ ಬಂದಿತ್ತು.ಅಂಗಳದ ಮಧ್ಯದ ಸುಮಾರು ಜಾಗ ಅದಾಗಲೇ ಒದ್ದೆ ಆಗಿತ್ತು.ನಾಳೆ ಮಾಡುವೆ,ನಾಡಿದ್ದು ಗೃಹಪ್ರವೇಶ ೧ ದಿನ ಅಂತರ.ಶ್ಯಾಮಣ್ಣ ಕೂಡಲೇ ಒಂದು ಜೀಪ್ ಮಾಡಿ ಹೋಗಿ ೪,೫ ಗೋಣಿ ಸಿಮೆಂಟಿನ ಹುಡಿ,ಮತ್ತು ಮರದ ಹುಡಿ ತೆಗೆದುಕೊಂಡು ಬಂದರು.ಸಪೂರದ ಕಣಿಯ ಮೂಲಕ ತುಂಬಿದ್ದ ನೀರನ್ನು ಹೊರಗೆ ಹಾಕಿದರು.ಅಷ್ಟು ಜಾಗವನ್ನು ಸಣ್ಣಗೆ ಅಗೆದು ಸಿಮೆಂಟಿನ ಹುಡಿಯ ಜೊತೆಗೆ ಸೇರಿಸಿ ಮತ್ತೆ ಮುಚ್ಚಿದರು.ಶ್ಯಾಮಣ್ಣ,ರಾಮಣ್ಣ ಸೇರಿ ನೆಲ ಹೊಡೆದು ಸರಿ ಮಾಡಿದರು.ಮೇಲೆ ಮರದ ಹುಡಿ ಹಾಕಿ ಬಿಟ್ಟರು.ಮತ್ತೆ ರಾತ್ರಿ ಇನ್ನೊಮ್ಮೆ ಗುಡಿಸಿ ಹೊಸ ಮರದ ಹುಡಿ ಹಾಕಿ ಬಿಟ್ಟರು.

ಅನೇಕ ಸಮಸ್ಯೆಗಳ ಸರಮಾಲೆ ಎದುರಾಯಿತು.ಆದರೆ ರಾಯರು ಪ್ರತಿಯೊಂದನ್ನು ಧನಾತ್ಮಕವಾಗಿ ತೆಗೆದುಕೊಂಡರು.ಅಣ್ಣಂದಿರ ಪೂರ್ಣ ಸಹಕಾರ ಹಿರಿಯರ ಆಶೀರ್ವಾದದಿಂದ ಬಂದ ಸಮಸ್ಯೆಗಳು ಅಷ್ಟೇ ಬೇಗ ಪರಿಹಾರವಾದವು.ರಾಯರ ಹಾಸ್ಯ ಪ್ರಜ್ಞೆ ಎಷ್ಟ್ತಿತ್ತೆಂದರೆ ಈ ವಿವಾಹದ ಗಡಿಬಿಡಿಯ ನಡುವೆಯೂ ಅವರು "ಭಟ್ಟರ ಮದುವೆಗೆ ೧೦೮ ವಿಘ್ನಗಳು" ಎಂಬ ಹಾಸ್ಯ ಲೇಖನವನ್ನು ಬರೆದರು.

ಮದುವೆ ಪುತ್ತೂರಿನ ಕಲ್ಯಾಣ ಮಂಟಪವೊಂದರಲ್ಲಿ ನಿಗದಿಯಾಗಿತ್ತು.ಆದರೆ ಮದುವೆಗೆ ರಾಯರ ನಿರೀಕ್ಷೆಗೂ ಮೀರಿ ,ಅದ್ಬುತ ಸ್ಪಂದನೆ ದೊರೆಯಿತು.ಬಂಧುಗಳು,ಗುರುಗಳು,ಮಿತ್ರವೃಂದ ಹೀಗೆ ಎಲ್ಲರ ಸಮಕ್ಷಮದಲ್ಲಿ ರಾಯರ ಮದುವೆ ಅದ್ದೂರಿಯಾಗಿ ನಡೆಯಿತು.ಸಂದ್ಯ ರಾಯರ ಕೈ ಹಿಡಿದಳು.ವೇಧಘೋಷ ಮುಗಿಲು ಮುಟ್ಟಿತು.ಇತ್ತ ರಾಯರು ತಾಳಿ ಕಟ್ಟುತ್ತಿದ್ದಂತೆಯೇ,ಜ್ಯೋಯಿಷರು ರಾಮನಾಥರು ಒಂದು ನಿಟ್ಟುಸಿರನ್ನು ಬಿಟ್ಟರು.ಸಮೀಪದಲ್ಲೇ ಇದ್ದ ಗಣೇಶ ಪ್ರಸಾದರಲ್ಲಿ ನಿನ್ನ ಚಿಕ್ಕಪ್ಪನ ಜೀವನದ ಮೊದಲ ಹಂತ "ಸಂಘರ್ಷದ ಹಾದಿ"ಮುಗಿಯಿತು. ಈ ಜೀವನದಲ್ಲಿ ಆತನಿಗೆ ಎಂದೂ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿಲ್ಲ.ಕೆಲವನ್ನು ಹೋರಾಡಿ,ಗುದ್ದಾಡಿ ಪಡೆದುಕೊಳ್ಳಬೇಕಾಯಿತು.ಇಲ್ಲಿಯವರೆಗೂ ಈತನ ಜೀವನ ಹಗ್ಗದ ಮೇಲೆ ನಡೆದಂತಿತ್ತು,ಸ್ವಲ್ಪ ಎಮಾರಿದರು ಕೆಳಗಡೆ ಉರುಳುವುದು ಗ್ಯಾರಂಟಿ.ಆದರೆ ಈತ ಬಹು ವಿಶಿಷ್ಟ,ಈ ಜೀವನವನ್ನು ಆನಂದದಿಂದಲೇ ಕಳೆದ.ಮರಳಿ ಪ್ರಯತ್ನವ ಮಾಡು ಎಂಬ ತತ್ವಕ್ಕೆ ಬದ್ದನಾಗಿ,ಕಷ್ಟಪಟ್ಟು ದುಡಿದದ್ದರಿಂದ ಏನೋ ಒಂದು ಒಳ್ಳೆಯ ಸ್ತಿತಿಯಲ್ಲಿ ಇದ್ದಾನೆ.೧೦೦ಅಂಕಕ್ಕೆ ಒಬ್ಬ ವಿದ್ಯಾರ್ಥಿ ಬರೆದರೆ ಆತನಿಗೆ ಬರಿ ೪೦ ರಿಂದ ೫೦ ಅಂಕಗಳು ಬಂದರೆ ಆತನಿಗೆ ಹೇಗಾದೀತು,ಅದಕ್ಕಿಂತಲೂ ಕಠಿಣವಾದ ಎಷ್ಟೋ ಘಟನೆಗಳು ನಿನ್ನ ಚಿಕ್ಕಪ್ಪನ ಜೀವನದಲ್ಲಿ ನಡೆದಿವೆ,ಆದರೆ ಈತ ಎಲ್ಲವನ್ನು ಗೆದ್ದಿದ್ದಾನೆ.ಅದಕ್ಕೆ ಈತ ಸಾಮಾನ್ಯನಲ್ಲ ಅಸಾಮಾನ್ಯ ಎಂದರು.ಕೆಲವೊಂದು ಘಟನೆಗಳು ಮಾತ್ರ ಗಣೇಶ ಪ್ರಸಾದರಿಗೆ ಗೊತ್ತಿತ್ತು.ಆದರೆ ಅವಷ್ಟೂ ಒಮ್ಮೆಲೇ ಕಣ್ಣ ಮುಂದೆ ಕಟ್ಟಿದಂತಾಗಿ ಪ್ರಸಾದರ ಕಣ್ಣಿಂದ ೨ ಹನಿ ಅವರಿಗೆ ಅರಿವಿಲ್ಲದಂತೆಯೇ ಜಾರಿತು.ಕಣ್ಣೋರೆಸುತ್ತ ಹಾಗಾದರೆ ಮುಂದಿನ ಜೀವನ ಹೇಗೆ ಎಂದು ಕೇಳಿದ.ಈ ಕ್ಷಣದಿಂದ ರಾಯರಿಗೆ ಜೀವನದ ೨ನೆಯ ಹಂತ ಪ್ರಾರಂಭವಾಗಿದೆ ಮುಂದೆ ಅನೇಕ ಅದ್ಬುತಗಳು ಸಂಭವಿಸಲಿವೆ ನೀನೆ ಕಣ್ಣಾರೆ ನೋಡುವಿಯಂತೆ,ಹಾ ನಿನಗೆ ರಾಯರ ಜೊತೆಗೆ ಕೆಲಸ ಮಾಡುವ ಭಾಗ್ಯ ದೊರೆಯುವುದು,ಮುಂದಿನ ಅದ್ಬುತಗಳಲ್ಲಿ ಭಾಗಿಯಾಗುವ ಸುವರ್ಣ ಅವಕಾಶ ನಿನಗೊದಗುವುದು ಎಂದರು.
ಮುಂದುವರೆಯುವುದು......

No comments:

Post a Comment