Thursday, January 21, 2010

ಹೋರಾಟದ ಹಾದಿ



ರಾಯರಿಗೆ ಕೂಡಲೇ ಉದ್ಯೋಗವಾಗಲಿಲ್ಲ ಎಂಬುದು ಮನಸ್ಸಿಗೆ ಅಷ್ಟೇನೂ ನೋವನ್ನುಂಟು ಮಾಡಲಿಲ್ಲ.ಆದರೆ "ಬ್ರಹ್ಮರಾಯರ" ಉಪಟಳ ಮಾತ್ರ ಮನಸ್ಸಿಗೆ ಬಹಳ ನೋವನ್ನುಂಟು ಮಾಡಿತ್ತು.ನಿತ್ಯ ಯಾವುದಾದರು ಕಾಲೇಜಿನ ಬಗ್ಗೆ ಹೇಳುವುದು,ಬಂದವರಲ್ಲಿ ನಮ್ಮ ಮೂರ್ತಿಗೆ ಪುತ್ತೂರಲ್ಲಿ ಕೆಲಸ ಸಿಕ್ಕೀತು ಆದರೆ ಟೀಚಿಂಗ್ ಗೆ ಏನು ಹೇಳಿದರು ಹೋಗುವುದಿಲ್ಲ ಎನ್ನುವುದು ಇವೆಲ್ಲ ಕೇಳಿ ಕೇಳಿ ಸಾಕಾಗಿತ್ತು.ರಾಯರು ವಿಟ್ಲದಲ್ಲಿ ಡ್ರೈವಿಂಗ್ ಕ್ಲಾಸಿಗೆ ಸೇರಿದರು.ಕೆಲವರು ಓ ಇನ್ನು ಜೀಪ್ ತೆಗೆದು ಬಾಡಿಗೆಗೆ ಓಡಿಸ್ತಾನೋ ಏನೋ ಎಂದು ಮಾತಾಡಲು ಶುರು ಮಾಡಿದರು.ಮನೆಯಲ್ಲಿ ಹೇಳಿದರೆ ತಂದೆಗೆ ಗೊತ್ತಾಗುತ್ತಿರಲಿಲ್ಲ ಮಗನ ಭಾವನೆಗಳು,ಆಸೆಗಳು ಇನ್ನು ಊರವರು ಹೇಳಿದ್ದಕ್ಕೆ ನಾನು ಯಾಕೆ ತಲೆ ಕೆಡಿಸಬೇಕು ಎಂಬಂತಿದ್ದರು ರಾಯರು.೩ ತಿಂಗಳಲ್ಲಿ ಡ್ರೈವಿಂಗ್ ಕಲಿತು,ಲೈಸನ್ಸ್ ಮಾಡಿಸಿ,ಪಾನ್ ಕಾರ್ಡ್,ಪಾಸು ಪೋರ್ಟ್ ಮುಂತಾದ ಬಾಕಿ ಇರುವ ಕೆಲಸಗಳೆಲ್ಲ ಮುಗಿಸಿ ರಾಯರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದರು.

ಇತ್ತ ಮಿತ್ರ ಪ್ರಸನ್ನನಿಗೆ ಕೆಲಸ ಸಿಕ್ಕಿತು.ಆದರೆ ಆತನಿಗೆ ದಿಡೀರಾಗಿ ಡೆಲ್ಲಿಗೆ ಹೋಗಲು ಬಂದದ್ದರಿಂದ ಅವನ ರೂಮೆ ರಾಯರಿಗೆ ಸಿಕ್ಕಿತು.ಉದ್ಯೋಗಕ್ಕಾಗಿ ಅಲೆದಾಟ,ದಿನವಿಡೀ ಓಡಾಟ ರಾಯರಿಗೆ ಬದುಕಿನ ಕರಾಳ ದರ್ಶನವಾಯಿತು.ಸಂಬಳ ಕಡಿಮೆಯಾದರೂ ಪರವಾಗಿಲ್ಲ ಕಂಪೆನಿಗೆ ಸೇರಬೇಕು ಎಂದು ರಾಯರು ಬಯಸಿದ್ದರು.ಆದರೆ ಅವರ ಕಲಿಯುವಿಕೆಗೆ,ಸಾಮರ್ಥ್ಯಕ್ಕೆ ಸೂಕ್ತ ಮನ್ನಣೆ ದೊರೆಯಲಿಲ್ಲ.ಎಲ್ಲರು ಜಾಸ್ತಿ ಇಂಜಿನಿಯರ್ ಕಲಿತವರನ್ನೇ ಆಯ್ಕೆ ಮಾಡಿದ್ದರಿಂದ ರಾಯರಿಗೆ ಉದ್ಯೋಗ ಸಿಗಲು ಕೆಲವು ಸಮಯವೇ ಹಿಡಿಯಿತು.ಕೊನೆಗೂ ರಾಯರಿಗೆ ಒಂದು ಸಣ್ಣ ಕೆಲಸ ಸಿಕ್ಕಿತು.ಇದನ್ನೇ ಬ್ರಹ್ಮರಾಯರು, ಆ ಈಗ ಖರ್ಚಿಗೆ ಕಳಿಸುವುದು ಬೇಡ ಎಂದಿದ್ದಾನೆ ಎಂದರು.ಕೆಲಸಕ್ಕಾಗಿ ರಾಯರು ಪಟ್ಟ ಕಷ್ಟ,ಇಂತ ವಿಷಮ ಪರಿಸ್ತಿತಿಯಲ್ಲೂ ರಾಯರು ತೋರಿದ ಸಂಯಮ,ತಾಳ್ಮೆ ನಿಜವಾಗಿಯೂ ಮೆಚ್ಚುವಂತದ್ದೆ.

ಕಾರ್ತಿಕನಿಗೆ ಕೋಲ್ಕತ್ತಾದಿಂದ ಮುಂಬೈಗೆ ಬಡ್ತಿ ಸಿಕ್ಕಿತು.ಆಗ ತನ್ನ ಸ್ತಾನಕ್ಕೆ ಆತ ಮೂರ್ತಿಯನ್ನು ರೆಕಮೆಂದು ಮಾಡಿದ.ಅದೇ ಸಮಯಕ್ಕೆ ರಾಯರು ಅದೇ ಕಂಪೆನಿಗೆ ಇಂಟರ್ವ್ಯೂಗೆ ಅರ್ಜಿ ಹಾಕಿದ್ದರು.ಇಂಟರ್ವ್ಯೂನಲ್ಲಿ ರಾಯರು ತಮ್ಮ ಪ್ರತಿಭೆಯನ್ನು ದರ್ಶನ ಮಾಡಿ ಕೊಟ್ಟರು.ರಾಯರು ಓಕೆ ಆದರು.ರಾಯರು ತಮ್ಮ ಪ್ರಯಾಣವನ್ನು ಸೀದಾ ಕೋಲ್ಕತ್ತಾಗೆ ಬೆಳೆಸಿದರು.ಕೊನೆಗೂ ರಾಯರ ಮನಸ್ಸಿಗೆ ಓಕೆ ಅನ್ನುವಂಥ ಕೆಲಸ ಸಿಕ್ಕಿತು.

ರಾಯರು ಸೆಮಿನಾರ್ ನಡಿಸಿಕೊಡುವ ರೀತಿ,ಅವರ ಮಾತುಗಾರಿಕೆ ಕಂಪೆನಿಗೆ ಹಿಡಿಸಿತು.ಅವರನ್ನು ನಾಸಿಕದಲ್ಲಿರುವ ಘಟಕಕ್ಕೆ ತರಬೇತಿ ಕೊಡಲು ಕಳಿಸಿತು.ಸಾಮಾನ್ಯವಾಗಿ ಹೊಸದಾಗಿ ಸೇರಿದವರನ್ನು ತರಬೇತಿಗೆ ಕಳಿಸುತ್ತಾರೆ.ಆದರೆ ರಾಯರು ತರಬೇತಿ ಕೊಡಲು ಬಂದಿದ್ದರು.ಅಲ್ಲಿರುವಾಗ ರಾಯರು "ಆಗ್ರಾ","ತಾಜ್ ಮಹಲ್ " ವೀಕ್ಷಿಸಿದರು.ಸುತ್ತ ಮುತ್ತ ಇರುವ ಎಲ್ಲ ಪ್ರವಾಸ ತಾಣಗಳನ್ನು ಸಂದರ್ಶಿಸಿದರು.ಮುಂಬೈ,ನಾಸಿಕ ಸುತ್ತ ಮುತ್ತ ಎಲ್ಲ ಕಡೆ ಹೋದರು.ಅವುಗಳನ್ನು ಬ್ಲಾಗಲ್ಲಿ ಇತರರಿಗಾಗಿ ಬರೆದರು.ಫೋಟೋ ತೆಗೆದರು,ನೆಟ್ಟಲ್ಲಿ ಪಬ್ಲಿಶ್ ಮಾಡಿದರು.ಷೇರ್ಖಾನ್ ಮೂಲಕ ಹೂಡಿಕೆ ಪ್ರಪಂಚಕ್ಕೆ ಕಾಲಿಟ್ಟರು.ಶೇರು ಲೋಕದ ಒಳ ಹೊರ ಪರಿಚಯ ಮಾಡಿಕೊಂಡರು.ಟೆಕ್ನಿಕಲ್ ಬ್ಲಾಗ್ ಗಳು ಹೊರಬಂದವು.ಹೀಗೆ ಸಾಹಿತ್ಯ ಮತ್ತು ವಿಜ್ಞಾನ ಎರಡನ್ನು ಬರೆದರು.


ಮಗ ಲೆಕ್ಚರ್ ಆಗುತ್ತಾನೆ ಎಂದು ಕನಸು ಕಟ್ಟಿಕೊಂಡಿದ್ದ ಬ್ರಹ್ಮರಾಯರಿಗೆ ಭಾರಿ ನಿರಾಸೆಯಾಯಿತು.ಮೊದಲಿಗೆ ಕೆಲಸ ಸಿಗಲಿಲ್ಲ ಎನ್ನುವಾಗ "ಬ್ರಹ್ಮರಾಯರಿಗೆ " ಮನದಲ್ಲಿ ಒಳಗೊಳಗೇ ಖುಷಿ ಆಗುತ್ತಿತ್ತು,ಮಗ ಇನ್ನಾದರೂ ಮನಸ್ಸು ಬದಲಾಯಿಸಬಹುದು,ಇಲ್ಲೇ ಎಲ್ಲಾದರೂ ಟೀಚಿಂಗ್ ಗೆ ಸೇರಬಹುದು ಎಂಬ ಭಾರಿ ನಿರೀಕ್ಷೆ ಇತ್ತು.ಆದರೆ ಇವ ಹಠ ಬಿಡದೆ ಕಂಪೆನಿ ಸೇರಿದ,ಇನ್ನು ಹೇಗೂ ಅದು ಬಿಟ್ಟು ಬರುವ ಹಾಗಿಲ್ಲ ಎಂದು ಬ್ರಹ್ಮರಾಯರು ಯೋಚಿಸಿದರು.ಅದರೂ ರಾಯರು ಊರಿಗೆ ಬಂದಾಗ ಒಮ್ಮೆ ಹೇಳಿ ನೋಡುವುದುಂಟು,ಎಲ್ಲಿಯಾದರೂ ಮನಸ್ಸು ಬದಲಾಯಿಸಿದರೆ ಎಂಬ ಒಂದು ಸಣ್ಣ ಅಸೆ.ಇತ್ತ ರಾಯರ ತಾಯಿಗೆ ಈಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕಿತು.ರಾಯರು ಸಂಕಟ ಪಡುವುದನ್ನು,ಕಷ್ಟ ಅನುಭವಿಸುವುದನ್ನು ತಾಯಿಗೆ ನೋಡಲು ಆಗುತ್ತಿರಲಿಲ್ಲ.ನಿತ್ಯ ದೇವರಿಗೆ ಒಮ್ಮೆ ನಮಸ್ಕಾರ ಮತ್ತೊಮ್ಮೆ ಬೈಗುಳ ಎರಡೂ ಒತ್ತೊತಿಗೆ ಸಿಗುತ್ತಿತ್ತು.ಒಮ್ಮೆ ನನಗೇನೂ ಕೊಡುವುದು ಬೇಡ,ಮೂರ್ತಿಗೆ ಒಂದು ದೊಡ್ಡ ಕೆಲಸ ಕೊಟ್ಟರೆ ಸಾಕು,ಅವ ಪಾಪ ಎಷ್ಟು ಕಷ್ಟ ಪಡುತ್ತಿದ್ದಾನೆ ಎಂದರೆ ಮತ್ತೊಮ್ಮೆ ದೇವರೇ ಇಲ್ಲ ದೇವರು ಇರುವುದು ನಿಜವಾದರೆ ಮೂರ್ತಿಗೆ ಹೀಗೆ ಆಗುತ್ತಿರಲಿಲ್ಲ,ಅವ ಯಾರಿಗೂ ಕೆಡುಕುಂಟು ಮಾಡಿದವನಲ್ಲ ಅವನಿಗೆ ಯಾಕೆ ಹೀಗೆ ಕಷ್ಟ ಕೊಡುವುದು,ದೇವರು ಎಂಬುವನು ಇದ್ದರೆ ಹೀಗೆ ಆಗುತ್ತಿರಲಿಲ್ಲ, ಎಲ್ಲ ಸುಳ್ಳು ,ನಾವು ಸುಮ್ಮನೆ ನಂಬುವುದು ಎಂದು ಬೈಯುತ್ತಿದ್ದರು .ಆದರೆ ಯಾರೇನೆ ಹೇಳಲಿ ರಾಯರು ಮಾತ್ರ ದೇವರಿಂದ ಸಮದೂರದಲ್ಲಿದ್ದರು.ಜಾಸ್ತಿ ನಂಬುತ್ತಿರಲಿಲ್ಲ,ಜಾಸ್ತಿ ಬೈಯುತ್ತಿರಲಿಲ್ಲ,ತಮ್ಮ ಪಾಡಿಗೆ ತಾವಿದ್ದರು.

ರಾಯರು ಯಾವುದೇ ಆದರು ಸಣ್ಣದರಲ್ಲೇ ತೃಪ್ತಿ ಹೊಂದುತ್ತಿರಲಿಲ್ಲ.ಸುಮಾರು ಒಂದೂವರೆ ವರ್ಷ ಕೆಲಸ ಮಾಡಿದರು.ಇಲ್ಲೇ ಇದ್ದರೆ ಜಾಸ್ತಿ ಅಭಿವೃದ್ದಿ ಇಲ್ಲ ಎಂದು ಅನಿಸತೊಡಗಿತು."ಎಂ ಟೆಕ್ "ಮಾಡುವುದೆಂದು ಮನದಲ್ಲೇ ನಿರ್ಧರಿಸಿದರು.ಮನೆಯಲ್ಲಿ ತಿಳಿಸಿದರು."ಬ್ರಹ್ಮರಾಯರ " ತಲೆ ಕೂಡಲೇ ಓಡಿತು.ಬಹುಶ: ಮಗನಿಗೆ ಕಂಪೆನಿಯಲ್ಲಿ ಕೆಲಸ ಮಾಡಿ ಬೊಡಿಯಿತು.ಇನ್ನು "ಎಂ ಟೆಕ್ "ಮಾಡಿ ಇಲ್ಲೇ ಎಲ್ಲಾದರೂ "ಲೆಕ್ಚರ್"ಆಗಿ ಸೇರಬಹುದು ಮನದಲ್ಲಿ ಹೊಸ ಅಸೆ ಚಿಗುರಿತು.ಕೂಡಲೇ ಒಪ್ಪಿಗೆ ಕೊಟ್ಟರು.ಕೊನೆಗೆ ರಾಯರು ಫೆಬ್ರವರಿಯಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟರು.ಮತ್ತೆ ಬೆಂಗಳೂರಿಗೆ ಹಿಂದಿರುಗಿದರು.ಕಾಲೇಜಿನ ಹುಡುಕಾಟ, ಫೀಸ್,ಕೋರ್ಸ್ ,ಸಿಲ್ಲೆಬಸ್ ಮುಂತಾದ ವಿವರ ಸಂಗ್ರಹಿಸಿದರು.

ಮೇ ತಿಂಗಳಲ್ಲಿ ರಾಯರ ಅಣ್ಣನ ಮಗಂದು ಉಪನಯನ ಕಾರ್ಯಕ್ರಮವಿತ್ತು.ರಾಯರು ಬಂದರು.ಉಪನಯನ ಗೌಜಿಯೋ ಗೌಜಿ,ಏನು ಸಂಬ್ರಮ ಏನು ಗಲಾಟೆ.ಕಾರ್ಯಕ್ರಮದಲ್ಲಿ ಸುಧರಿಕೆ ಮಾಡಿದ್ದೂ,ಹೋಳಿಗೆ ಹೊಡೆದದ್ದು ಆಯಿತು.ಎಲ್ಲ ಮುಗಿದು ಮಧ್ಯಾನ್ನ ಮೇಲೆ ಹಾಗೆ ಸೋಫಾಕ್ಕೆ ಒರಗಿ ರಾಯರು,ಸಂಭಂಧಿಕರಾದ ಭರತನು ಕೂತಿದ್ದರು.ಮುದ್ದಿನ ಸೊಸೆ ಭವ್ಯಳ ಕೈಯಲ್ಲಿ ಒಂದು ಹಾಡು ಹಾಡಿಸಬೇಕೆಂದು ಬಹಳ ಪ್ರಯತ್ನ ಪಡುತ್ತಿದ್ದರು.ಅವಳು ಹೇಳುತ್ತಿರಲಿಲ್ಲ ಸಾಕಸ್ಟು ಸತಾಯಿಸುತ್ತಿದ್ದಳು.ಆಗ ಅಲ್ಲಿಗೆ ಬಂದ ಒಂದಿಬ್ಬರು ನೆಂಟರಿಸ್ತರು ಅಲ್ಲ ಮೂರ್ತಿ ಈಗಿನ ಕಾಲದಲ್ಲಿ ಒಂದು ಕೆಲಸಾಂತ ಆಗುವುದೇ ಕಷ್ಟ,ಅಂಥದುದರಲ್ಲಿ ಇದ್ದ ಕೆಲಸವೆ ಬಿಟ್ಟು ಬಂದಿದ್ದಿಯಲ್ಲ,"ಎಂ ಟೆಕ್ "ಮಾಡಬಾರದು ಅಂತ ಹೇಳುವುದಲ್ಲ ಸ್ವಲ್ಪ ನೋಡಿಕೊಳ್ಳಬೇಕು ಎಂದರು.ರಾಯರು ಏನು ಹೇಳಲಿಲ್ಲ.ಯಾಕೆಂದರೆ ಆಗ ಏನು ಹೇಳಿದರು ಅವರು ಕೇಳಿಸಿಕೊಳ್ಳುವ ಹಾಗಿರಲಿಲ್ಲ.ಹಾಗಾಗಿ ರಾಯರು ಮುಂದೆ ದೊಡ್ಡ ಕೆಲಸವಾಗಬಹುದು ನೋಡುವ ಎಂದು ಹಾರಿಕೆಯ ಉತ್ತರ ಕೊಟ್ಟರು.
ನಿಧಾನವಾಗಿ ಒಬ್ಬೊಬ್ಬರೇ ಚದುರತೊಡಗಿದರು.ಜ್ಯೂಸಿಗೆಂದು ತಂದಿದ್ದ ಕಲ್ಲಂಗಡಿ ಹಣ್ಣು ಉಳಿದಿತ್ತು ಅದನ್ನು ತಿನ್ನುತ್ತ ರಾಯರು ತಮ್ಮಷ್ಟಕ್ಕೆ ತಾವೇ ಹೇಳಿಕೊಂಡರು,ಅಲ್ಲಲ್ಲ ಹಾಡಿಕೊಂಡರು."ಯಾರೇನೆ ಹೇಳಲಿ ನಾ ಎಂ ಟೆಕ್ ಮಾಡುವೆ ".ಮುಖದಲ್ಲೊಂದು ವಿಷಾದದ ನಗೆ ಚಿಮ್ಮಿತು.ಸೋಫಾಗೆ ಒರಗಿ ಹಾಗೆ ಯೋಚನಾಮಗ್ನರಾದರು.

ರಾಯರು ತಮ್ಮ ಮುಂದಿನ ೨ ವರ್ಷಗಳಿಗೆ ಬೇಕಾಗುವಷ್ಟು ಹಣ ಹೊಂದಿಸಿದ್ದರು.ಆದರೆ ಕಾಲೇಜು ಫೀಸ್ ಗೆ ಬೇಕಾದ ದುಡ್ಡಿಗೆ "ಎಜುಕೇಶನ್ ಲೋನ್" ಮಾಡುವುದೆಂದು ನಿರ್ಧರಿಸಿದರು."ಬ್ರಹ್ಮರಾಯರ " ಒಪ್ಪಿಗೆಯೂ ಆಯಿತು.ವಿಟ್ಲದ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಕೇಳಿದರು.ಮ್ಯಾನೆಜೆರ್ ಚೆನ್ನಾಗಿ ಮಾತಾಡಿ ಒಂದು ಫಾರಂ ಕೊಟ್ಟು ಫಿಲ್ ಮಾಡಿ,ನಿಮ್ಮದು ಮತ್ತು ತಂದೆಯದು ಸಹಿ ಹಾಕಿ ತನ್ನಿ,ಎಲ್ಲ ವ್ಯವಸ್ತೆ ಮಾಡುವ ಎಂದರು.ಸರಿ ರಾಯರು ವಿವರ ಕೇಳಿದರು.ಚಕ್ರಬಡ್ಡಿ ಎಲ್ಲ ಏನು ಇಲ್ಲ.ನೀವು ಕಲಿಯುವಾಗ ಏನು ಕಟ್ಟುವುದು ಇರುವುದಿಲ್ಲ,ಕಲಿತು ೧ ವರ್ಷ ಟೈಮ್ ಇದೆ,ಆಮೇಲೆ ೫ ವರ್ಷ ಅವಧಿ ಇದೆ,ಕಂತುಗಳಲ್ಲಿ ಕಟ್ಟಿದರೆ ಆಯಿತು ಎಂಬ ಉತ್ತರ ಸಿಕ್ಕಿತು.ಮೊದಲಿಗೆ ನಿಮ್ಮದು ಒಂದು ಅಕೌಂಟ್ ಓಪನ್ ಮಾಡಬೇಕು ಎಂದರು.ಅದಕ್ಕೆ ಬೇಕಾದ ಫಾರಂ ಎಲ್ಲ ತೆಗೆದುಕೊಂಡು ರಾಯರು ಮನೆಗೆ ಬಂದರು.


ತಂದೆಗೆ ಎಲ್ಲ ವಿಷಯ ತಿಳಿಸಿದರು.ರಾಯರತಂದೆಯ"ಪೆನ್ಶನ್ ಹಣ "ಬರುತ್ತಿದ್ದುದು ಅದೇಬ್ಯಾಂಕ್ಗೆ .ಹಾಗಾಗಿ ಇಂಟ್ರೋಡ್ಯುಸರ್ ಬ್ರಹ್ಮರಾಯರೇ.ಅವರ ಸಹಿ,ಅಕೌಂಟ್ ನಂಬರ್ ಬರೆದು ಫಾರಂ ಫಿಲ್ ಮಾಡಿ,ರಾಯರು ಮರುದಿನ ವಿಟ್ಲಕ್ಕೆ ಹೋದರು.ಅಲ್ಲಿ ಫಾರಂ ಪರಿಶೀಲನೆ ಮಾಡಿದ ನಂತರ ಇದು ಇಂಟ್ರೋಡ್ಯುಸೆರ್ ಸಹಿ ಮ್ಯಾಚ್ ಆಗುವುದಿಲ್ಲ ಎಂದಾಯಿತು.ಬ್ರಹ್ಮರಾಯರು ತಾವು ಅಕೌಂಟ್ ಓಪನ್ ಮಾಡುವಾಗ ಪೂರ್ಣ ಸಹಿ ಹಾಕಿದ್ದರು.ಇಲ್ಲಿ ಶಾರ್ಟ್ ಫಾರಂ ಹಾಕಿದ್ದರು.ರಾಯರಿಗೆ ಸಿಟ್ಟು, ಮತ್ತು ಬೇಜಾರು ಒಟ್ಟಿಗೆ ಆಯಿತು,ಇನ್ನು ಪುನ: ಮನೆಗೆ ಹೋಗಿ ಬದಲಾಯಿಸುವುದು ಯಾರು?ಇಲ್ಲೇ ಯಾರಾದರು ಅಕೌಂಟ್ ಇರುವವರು ಪರಿಚಯದವರು ಸಿಗುತ್ತಾರೆಯೇ ಎಂದು ಹಾಗೆ ಪೇಟೆಗೆ ಬಂದರು.ಅದೃಷ್ಟಕ್ಕೆ ಸ್ಟುಡಿಯೋದವರೊಬ್ಬರು ರಾಯರಿಗೆ ಪರಿಚಯವಿರುವವರು ಸಿಕ್ಕಿದರು,ಅವರ ಸಹಿ ಹಾಕಿಸಿ ಮತ್ತೆ ಬ್ಯಾಂಕಿಗೆ ಬಂದು ಕೊಟ್ಟರು.ಅಕೌಂಟ್ ಓಪನ್ ಆಯಿತು.ಈಗ ಮ್ಯಾನೇಜರ್ ನೀವು ಮತ್ತು ತಂದೆ ನಾಳೆ ಒಟ್ಟಿಗೆ ಬನ್ನಿ ಇನ್ನು ಒಂದೆರಡು ಸಹಿ,ಫಾರಂ ಫಿಲ್ ಮಾಡುವುದಿದೆ ಎಂದರು.ರಾಯರು ಮನೆಗೆ ಬಂದು ವಿಷಯ ಹೇಳಿ ಸಹಿ ತಪ್ಪಿದರ ಬಗ್ಗೆ ತಿಳಿಸಿದಾಗ,ಬ್ರಹ್ಮರಾಯರು ಹಾ ನೀನು ಹೇಳಿದ್ದು ಸರಿ,ನಾನು ೨,೩ ರೀತಿ ಸಹಿ ಮಾಡುತ್ತೇನೆ,ಎಲ್ಲಿ ಯಾವುದನ್ನೂ ಹಾಕಿದ್ದೇನೆ ಎಂದು ನೆನಪಿಲ್ಲ,ಹಿಂದೆ ಒಮ್ಮೆ ಅದೇ ಬ್ಯಾಂಕ್ ಲ್ಲಿ ಹಣ ತೆಗೆಯಲು ಹಾಗೆ ಆಗಿತ್ತು,ಆಮೇಲೆ ಅವರ ಹತ್ತಿರ ಕೇಳಿ ಸರಿಯಾದ ಸಹಿ ಹಾಕಿದ ಮೇಲೆಯೇ ಕೊಟ್ಟದ್ದು ಎಂದರು.

ಬ್ರಹ್ಮರಾಯರು ಮತ್ತು ರಾಯರು ಒಟ್ಟಿಗೆ ಬ್ಯಾಂಕಿಗೆ ಹೋದದ್ದೇ ಇಲ್ಲ.ರಾಯರು ೧೦ ಗಂಟೆಗೆ ಮನೆಯಿಂದ ಹೊರಟರೆ ಬ್ರಹ್ಮರಾಯರು ನೀನು ಹೋಗು ನಾನೀಗ ಬರುತ್ತೇನೆ ಎನ್ನುವುದು.ಸರಿ ಎಂದು ರಾಯರು ಬ್ಯಾಂಕಿಗೆ ಹೋಗಿ ೧ ಗಂಟೆವರೆಗೆ ಕಾದರು.ಬ್ರಹ್ಮರಾಯರ ಪತ್ತೆಯೇ ಇಲ್ಲ,ಆಮೇಲೆ ರಾಯರು ತಾವು ಎಲ್ಲೆಲ್ಲ ಫಿಲ್ ಮಾಡಬೇಕೆಂದು ಕೇಳಿ ಮಾಡಿ,ತಮ್ಮ ಸಹಿ ಹಾಕಿ ತಂದೆ ಇನ್ನೇನು ಬರಬಹುದು ಎಂದು ಹೇಳಿ ಅಲ್ಲಿಂದ ಬಂದರು.ರಾಯರ ಬಸ್ ವಿಟ್ಲದಿಂದ ಹೊರಟ ಕೂಡಲೇ ಬ್ರಹ್ಮರಾಯರು ವಿಟ್ಲ ತಲುಪಿದರು.ಬ್ಯಾಂಕಿಗೆ ಹೋಗಿ ಮ್ಯಾನೇಜರ್ ಹತ್ತಿರ ಅದು ಇದು ಮಾತನಾಡಿ ಒಂದೆರಡು ಕಡೆ ಸಹಿ ಹಾಕಿ ಬ್ರಹ್ಮರಾಯರು ಬಂದರು.

ಮರುದಿನ ರಾಯರು ಹೋದರೆ,ನಿಮ್ಮ ತಂದೆಯದು ಇನ್ನು ೨,೩ ಕಡೆ ಸಹಿ ಆಗಬೇಕಿತ್ತು,ನಾವು ಅವರು ಹಾಕಿರಬಹುದು ಎಂದು ಆಗ ನೋಡಲಿಲ್ಲ ಎಂದರು.ರಾಯರಿಗೆ ತಂದೆಯ ಸ್ವಭಾವದ ಪರಿಚಯ ನಿಧಾನವಾಗಿ ಆಗತೊಡಗಿತು.ಯಾಕೆಂದರೆ ಸಣ್ಣದಾಗಿರುವಗಲೇ ತಂದೆ ದೂರ ಇದ್ದುದು.ಅಮ್ಮನೇ ಎಲ್ಲ ಕೆಲಸ ನೋಡಿಕೊಂಡಿದ್ದುದು,ಹಾಗಾಗಿ ತಂದೆಯದು ದೊಡ್ಡ ಟಚ್ ಇರಲಿಲ್ಲ.ಏನು ಮಾಡಲು ಸಾಧ್ಯವಿಲ್ಲ,ರಾಯರು ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದರು.ತಂದೆ ನಾನು ಬರ್ತೇನೆ ನೀನು ನಿನ್ನ ಕೆಲಸ ಮುಗಿಸಿ ಬಾ ಗಡಿಬಿಡಿ ಇಲ್ಲ ಎಂದರು.ಇನ್ನು ಇವತ್ತು ಕಾಯುವುದು ವೇಸ್ಟ್ ಎಂದು ರಾಯರು ಹಿಂದಿರುಗಿದರು.

ಮರುದಿನ ಮ್ಯಾನೇಜರ್ ಸಹಿ ಎಲ್ಲ ಸರಿಯಾಗಿದೆ,ಇನ್ನು ಒಂದೆರಡು ಸ್ಟಾಂಪ್ ಪೇಪರ್ ಬೇಕಿತ್ತು,ಅಗ್ರೀಮೆಂಟ್ ಮಾಡಲು ಎಂದರು.ಸ್ಟಾಂಪ್ ಪೇಪರ್ ಗೆ ಆಗ ಬಿ ಸಿ ರೋಡ್ ಗೆ ಹೋಗಬೇಕಿತ್ತು.ರಾಯರು ಅಲ್ಲಿಗೆ ಹೋಗಿ ೨ ಸ್ಟಾಂಪ್ ಪೇಪರ್ ತೆಗೆದುಕೊಂಡು ಬರುವಾಗ ಮಧ್ಯಾನವಾಗಿತ್ತು.ಮೂರ್ತಿ ನೀವು ನಾಳೆ ಇದನ್ನು ತೆಗೆದುಕೊಂಡು ಬನ್ನಿ,ಇವತ್ತು ಸ್ವಲ್ಪ ಬ್ಯುಸಿ ಇದ್ದೇವೆ ಎಂದರು ಮ್ಯಾನೆಜೆರ್.ಮತ್ತೂ ಒಂದು ದಿನ ಮುಂದೆ ಹೋಯಿತು.

ಮರುದಿನ ಸ್ಟಾಂಪ್ ಪೇಪರ್ ನಲ್ಲಿ ಬರೆಯಬೇಕಾದ ಒಪ್ಪಂದವನ್ನೆಲ್ಲಾ ಬರೆದಾಯಿತು.ಆದರೆ ತಂದೆ,ಮಗ ಇಬ್ಬರು ಒಟ್ಟಿಗೆ ಮ್ಯಾನೆಜೆರ್ ಮುಂದೆ ಸಹಿ ಹಾಕಬೇಕೆಂದು ಹೇಳಿದರು.ಇವತ್ತು ರಾಯರು ಕೇಳಿದರು,ಇನ್ನು ಬೇರೆ ಯಾವುದಾದರು ಫಾರಂ ಫಿಲ್ ಮಾಡುವುದು ಇದೆಯಾ,ಇನ್ನು ಮತ್ತೆ ನಾಳೆ ಬಂದಾಗ ಇನ್ನೊಂದನ್ನು ಹೇಳಬೇಡಿ.ಈಗಾಗಲೇ ನಾನು ಲೋನ್ ಗೋಸ್ಕರ ಓಡಾಡುವುದು ಒಂದು ವಾರವಾಯಿತು,ಇನ್ನು ಒಂದು ಹಂತ ತಲುಪಿಲ್ಲ ಎಂದು ಸ್ವಲ್ಪ ಖಾರವಾಗಿ ಮಾತಾಡಿದರು.ಬಿಸಿಯಾಗದೆ ಬೆಣ್ಣೆ ಕರಗದು ಎಂಬಂತೆ ರಾಯರು ಮಾತಾಡುವವರೆಗೂ ಮ್ಯಾನೇಜರ್ ಆಟ ಅಡಿಸಿದ್ದರು.ದಿನ ಒಂದೊಂದೇ ಹೇಳುವುದು,ಬೊಡಿಸುವುದು,ಯಾರೇ ಆದರು ಲೋನ್ ಬೇಡ ಎಂಬಂತೆ ಮ್ಯಾನೆಜೆರ್ ವರ್ತಿಸಿದ್ದರು.ಕೊನೆಗೆ ಮತ್ತೂ ೨ ಅರ್ಜಿ ತುಂಬುವುದು ಬಾಕಿ ಇತ್ತು.ಅದನ್ನು ಮುಗಿಸಿ ರಾಯರು ಮನೆಗೆ ಬಂದರು.

ಇವತ್ತು ನಾನು,ನೀವು ಜೊತೆಗೆ ಹೋಗುವುದು ಎಂದು ರಾಯರು ಬ್ರಹ್ಮರಾಯರಲ್ಲಿ ಹೇಳಿದರು.ಅದರೂ ಬ್ರಹ್ಮರಾಯರಿಗೆ ಪಕ್ಕಕ್ಕೆ ಹೊರಟಾಗಲಿಲ್ಲ,ಅಂತೂ ತಂದೆಯನ್ನು ಕರೆದುಕೊಂಡು ರಾಯರು ಬ್ಯಾಂಕಿಗೆ ಬರುವಾಗ ಮಧ್ಯಾನ್ನ ೧ ಗಂಟೆ ಆಗಿತ್ತು.ಬೇಕಾದ ಕಡೆ ಎಲ್ಲ ಸಹಿ ಮಾಡಿಸಿ ಲೋನ್ ಅರ್ಜಿ ಕೊಟ್ಟು ಅಲ್ಲಿಂದ ಹೊರಡುವಾಗ ೨ ೩೦.ಹೀಗೆ ಲೋನ್ ಪಾಸು ಅಗುವಸ್ಟರಲ್ಲಿ ರಾಯರು ಮ್ಯಾನೆಜೆರ್ ಮತ್ತು ಬ್ರಹ್ಮರಾಯರ ನಡುವೆ ಸಿಕ್ಕು "ಅಪ್ಪಚ್ಚಿ" ಆಗಿದ್ದರು.

ಮುಂದುವರೆಯುವುದು...

No comments:

Post a Comment